ಕರ್ನಾಟಕ ರಾಜ್ಯ ಪತ್ತಿನ ಸಹಕಾರ ಸಂಘಗಳ ಮಹಾಮಂಡಳ ನಿ., ಬೆಂಗಳೂರು ಇದರ ವತಿಯಿಂದ ಶಿವಮೊಗ್ಗ ವಿಭಾಗದ ವ್ಯಾಪ್ತಿಗೊಳಪಡುವ ಎಲ್ಲಾ ಜಿಲ್ಲೆಗಳ ಪತ್ತಿನ ಸಹಕಾರ ಸಂಘಗಳ ಆಡಳಿತ ಮಂಡಳಿ ನಿರ್ದೇಶಕರು, ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ದಿನಾಂಕ: 28-07-2018 ರಂದು ಒಂದು ದಿನದ ಶೈಕ್ಷಣಿಕ ಕಾರ್ಯಗಾರವನ್ನು ಚಿತ್ರದುರ್ಗ ನಗರದ ಜೆ.ಎಂ.ಕಂರ್ಫಟ್ಸ್, ಇದರ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.
ಈ ಕಾರ್ಯಗಾರದ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು ಇದರ ನಿರ್ದೇಶಕರಾದ ಶ್ರೀ ಎಸ್.ಆರ್. ಗಿರೀಶ್ ಇವರು ಉದ್ಘಾಟಿಸಿ ಮಾತನಾಡಿ ಸಹಕಾರ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ಹಾಗೂ ಸಹಕಾರ ಸಂಘಗಳ ಕಾಯ್ದೆ ನಿಯಮಗಳ ಚೌಕಟ್ಟಿನಲ್ಲಿ ಕರ್ತವ್ಯ ನಿರ್ವಹಿಸಲು ಸೂಕ್ತ ಹಾಗೂ ಹೆಚ್ಚು ಕಾರ್ಯಗಾರಲ್ಲಿ ಭಾಗವಹಿಸಿ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳುವುದು ಸೂಕ್ತವೆಂದು ತಿಳಿಸಿ ಕಾರ್ಯಗಾರದ ಮುಖ್ಯ ದ್ಯೇಯೋದೇಶಗಳ ಬಗ್ಗೆ ನೆರೆದಿದ್ದ ಸಹಕಾರ ಸಂಘಗಳ ಶಿಬಿರಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಶ್ರೀ ಸಿ.ಎಂ.ಮಾರೇಗೌಡ , ಅಧ್ಯಕ್ಷರು, ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಹಕಾರ ಸಂಘಗಳ ಮಹಾಮಂಡಳ ನಿ., ಬೆಂಗಳೂರು ಇವರು ತಮ್ಮ ಅಧ್ಯಕ್ಷರ ಭಾಷಣದಲ್ಲಿ ಮಾತನಾಡಿ ಸಹಕಾರ ಸಂಘಗಳು ಬದಲಾಗುತ್ತಿರುವ ಆರ್ಥಿಕ ಪರಿಸ್ಥಿತಿಗಳನ್ನು ಮನಗಂಡು ಕರ್ತವ್ಯ ನಿರ್ವಹಿಸುವುದು ಅತಿಸೂಕ್ಷವಾಗಿರುತ್ತದೆ. ಅದೇ ರೀತಿ ಸದರಿ ಕಾರ್ಯಾಗಾರದ ಉದ್ದೇಶಿತ ವಿಷಯಗಳ ಬಗ್ಗೆ ಹೆಚ್ಚಿನ ಗಮನ ಹಾಗೂ ವಿಷಯಗಳನ್ನು ಆಲಿಸಿ ತಮ್ಮ ಸಹಕಾರ ಸಂಘಗಳಲ್ಲಿ ಅಳವಡಿಸಿಕೊಳ್ಳಲು ಸೂಚಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪತ್ತಿನ ಮಹಾಮಂಡಳದ ನಿರ್ದೇಶಕರುಗಳಾದ ಶ್ರೀ ಜಿ. ಮಲ್ಲಿಕಾರ್ಜುನಯ್ಯ, ಶ್ರೀ ಕೆ. ನಾರಾಯಣ, ಮತ್ತು ಶ್ರೀ ಎಂ.ಜೆ. ನರೇಂದ್ರಕುಮಾರ್ ಇವರು ಉಪಸ್ಥಿತರಿದ್ದರು.
ಅತಿಥಿಗಳಾಗಿ ಚಿತ್ರದುರ್ಗ ಜಿಲ್ಲಾ ಸಹಕಾರ ಯೂನಿಯನ್ನ ಅಧ್ಯಕ್ಷರಾದ ಶ್ರೀ ಜಿಂಕಲ್ ಬಸವರಾಜ್, ವಿಶೇಷ ಆಹ್ವಾನಿತರಾಗಿ ಶ್ರೀ ವೀರಶೈವ ಅರ್ಬನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಇದರ ಉಪಾದ್ಯಕ್ಷರಾದ ಶ್ರೀ ಎಸ್. ಪರಮೇಶ್ ಇವರು ಹಾಜರಿದ್ದರು.
ಸದರಿ ಕಾರ್ಯಾಗಾರದಲ್ಲಿ ಪತ್ತಿನ ಸಹಕಾರ ಸಂಘಗಳ ಅಭಿವೃದ್ಧಿಗಾಗಿ ಆಡಳಿತ ಮಂಡಳಿ ನಿರ್ದೇಶಕರು, ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಸಿಬ್ಬಂದಿಗಳ ಶೈಕ್ಷಣಿಕ ಸಾಮಥ್ರ್ಯವನ್ನು ಹೆಚ್ಚಿಸುವ ಸಲುವಾಗಿ ಶ್ರೀ ಅನಿಲ್ ಭಾರದ್ವಜ್, ಸಿ.ಎ. ಬೆಂಗಳೂರು ಇವರಿಂದ ಪತ್ತಿನ ಸಹಕಾರ ಸಂಘಗಳಿಗೆ ಅನ್ವಯವಾಗುವಂತೆ ಆದಾಯ ತೆರಿಗೆ , ಜಿಎಸ್ಟಿ ಕುರಿತು ಉಪನ್ಯಾಸ ಹಾಗೂ ಶ್ರೀ ಶಶಿಧರ ಎಲೆ, ಸಹಕಾರ ಸಂಘಗಳ ಅಪರ ನಿಬಂಧಕರು (ನಿವೃತ್ತ) ಇವರಿಂದ ಸಹಕಾರ ಸಂಘಗಳಲ್ಲಿ ಸಾಲವಸೂಲಾತಿ, ಹಾಗೂ ಚುನಾವಣೆ ಪೂರ್ವಸಿದ್ದತೆ ಕುರಿತು ಉಪನ್ಯಾಸ ನೀಡಲಾಯಿತು.
ಕಾರ್ಯಾಗಾರದ ಪ್ರಾರಂಭದಲ್ಲಿ ಶ್ರೀ ಜಿ. ಮಲ್ಲಿಕಾರ್ಜುನಯ್ಯ, ನಿರ್ದೇಶಕರು ಪತ್ತಿನ ಮಹಾಮಂಡಳ ಇವರು ಸ್ವಾಗತಕೋರಿದರು ನಂತರ ಮಹಾಮಂಡಳದ ಮತ್ತೋರ್ವ ನಿರ್ದೇಶಕರಾದ ಶ್ರೀ ಎಂ.ಜೆ. ನರೇಂದ್ರಕುಮಾರ ರವರು ಕಾರ್ಯಕ್ರಮ ನಿರೂಪಿಸಿದರು. ನಂತರ ಮಹಾಮಂಡಳದ ಸಿಬ್ಬಂದಿಯಾದ ಶ್ರೀ ಸುರೇಶ್ ಎಂ.ಹೆಚ್ ರವರು ವಂದನಾರ್ಪಣೆ ಸಲ್ಲಿಸಿದರು.